ಅದೇಕೊ ಗೊತ್ತಿಲ್ಲ,
ನೆನಪುಗಳು ಬಿಕ್ಕುತ್ತಿವೆ,,
ಮೂಲೆಮಣ್ಣಿನೊಳು ಸುಮ್ಮನೆ
ಪವಡಿಸಿದ್ದವು ಕಾರಿಯಂತೆ.
ಮೂಲೆಯ ಕಸದಂತೆ
ಜಾಡಿಸಿ ಬಿಟ್ಟಳು ಮನದೊಡತಿ
ದಿಕ್ಕಾಪಾಲಾಗಿ ಎದ್ದೊಡುತಿವೆ
ದಾತರು ಯಾರಿಲ್ಲವೆಂದು.
ಈಗೀಗ ನೆನಹುಗಳಿಗೂ
ಬಹಳ ಬೇಸರ ಒಂಟಿ ತಾನೆಂದು,,,,
ಒಡತಿ ಜಾಡಿಸಿದ್ದು
ನೆನಪುಗಳಷ್ಟೆಯಲ್ಲ
ಬೇಗುದಿಯ ಬದುಕಿನಾಳವನು.
ಕಲಕಿ ಬೆದಕಿ ಹುಣ್ಣು
ಹಣ್ಣಾಗಿ ಕೊಳೆತು
ಮಣ್ಣ ಕಣವಾಗಿದೆ,
ನೆನಪ ಸಂತೆಯಲಿ
ಹಳೆತಾಗಿದ್ದ ಕನಸುಗಳು
ಸಾಯಲಾರದೆ ಸತ್ತು
ಆತ್ಮ ತಿರುಗುತ್ತಿದೆ.
ನೀ ಬರುವ ದಾರಿಯ
ಕಾಯುತ್ತಲಿದ್ದವು ಕಣ್ಣಾಲಿಗಳು,,
ಕೊನೆಗೂ ನೀ ಬಂದೆ,,
ನಿಂದಿದ್ದು ಮಾತ್ರ ನನ್ನೆದಯ
ಗೂಡು ಹೊರಗೆ,,
ಅದೇ ಜಾಗ ಅದೆ ನೆನಪು,,
ಸುಟ್ಟು ಮಾಸಿದೆ,,
ನೆಟ್ಟ ಗಿಡ ಹುಟ್ಟಿದೆ,,
ಬರುವುದು ಬಂದೆ,,
ತಡವಾಗಿ ಏಕೆ ಬಂದೆ??
ನೆನಪ ಸುಳಿಯ ಹೊತ್ತು ಬಂದೆ
ನಿನ್ಮ ಕಣ್ಣೀರಲಿ ನನ್ನ ಬೂದಿ
ತೊಳೆಯಲಾರದಷ್ಟು
ಸಾಪಾ ಸಾಪಾಟಾಗಿದೆ.
ಪ್ರತಿ ಉಸಿರು ಹಿಡಿದು ಬಿಡುವಾಗಲೂ
ರವಿಗೆ ತೆರಿಗೆ ಕಟ್ಟುತ್ತಿದ್ದೆ,,
ಪಡುವಣದಿ ಬಾಗಿ ಮತ್ತೆ
ನನಗಾಗಿ ಓಡೋಡಿ ಬರುತಲಿದ್ದ
ಆದರೆ,,
ಏಳು ಸಾಗರದಾಚೆ ಇರದ
ನೀನು ಬರಲೇ ಇಲ್ಲ,,
ರವಿಗೆ ಸುಂಕ ಕಟ್ಟಲಾಗದೆ ಹೈರಣಾದೆ,,
ಬೆಳಕು ಚೆದುರಿ ಇರುಳು ಮೂಡಿತಷ್ಟೆ,,.
ನಿನ್ನ ನೆನಪಿನ ಬುತ್ತಿಗಂಟಿನೊಳಗೆ
ಮುಖವಿಟ್ಟು ಈಗ
ನಿರಾಳವಾಗಿರುವೆ ನೋಡು.
ಯಾರು ದುಃಖಿಸಬೇಡಿ,
ಬದುಕು ಬಲು ದುಬಾರಿ,,.
ಕಾಯಿಸುವ ಮುನ್ನ
ಬಂದು ಬಿಡಿ,,
ರೇಗುವ ಮುನ್ನ ಮನ್ನಿಸಿ ಬಿಡಿ.
ದ್ವೇಷಿಸುವ ಮುನ್ನ ಪ್ರೀತಿಸಿಬಿಡಿ.
ಕಾಲನ ಕರೆ ಬರುವ ಮುನ್ನ ಹೋಗಬೇಡಿ.
©✍️ವಾಣಿ ಭಂಡಾರಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ