ಈ ಸಂಭ್ರಮದ ಸುದ್ದಿಯನ್ನು ಪೂರ್ತಿ ಓದಿ..
"ನೈತಿಕ ಸ್ಥೈರ್ಯ ನೀಡಿದ ಸಣ್ಣದೊಂದು ಗೆಲುವು.. ಯುದ್ದ ಮುಗಿದಿಲ್ಲ ಕಾನೂನು ಹೋರಾಟ ಬಾಕಿ ಇದೆ.."
ಕಳೆದ ತಿಂಗಳಿನ "ಉತ್ಥಾನ" ಮಾಸಪತ್ರಿಕೆಯಲ್ಲಿ ಶ್ರೀ ಗುರುಮೂರ್ತಿ ಪೆಂಡಕೂರು ಎನ್ನುವವರು, ನನ್ನ "ಅಪ್ಪನೆಂಬ ಅದ್ಭುತ" ಎನ್ನುವ ಕವಿತೆಯನ್ನು ಯಥಾವತ್ತಾಗಿ ಭಟ್ಟಿಯಿಳಿಸಿ ತಮ್ಮ ಹೆಸರಿನಲ್ಲಿ ಫೋಟೋ ಸಹಿತ ಪ್ರಕಟಿಸಿಕೊಂಡಿದ್ದರು. ಈ ಕವಿತೆಯನ್ನು ನಾನು 2015ರಲ್ಲಿ ಜೂನ್ 22 ರಂದು ಮುಖಪುಸ್ತಕದಲ್ಲಿ ಪ್ರಕಟಿಸಿದ್ದೆ. 2016 ರಲ್ಲಿ ಗೋಮಿನಿ ಪ್ರಕಾಶನದಿಂದ ಪ್ರಕಟಿತವಾದ ನನ್ನ "ಹೂವಾಡಿಗ" ಕವನ ಸಂಕಲನದಲ್ಲೂ ಪ್ರಕಟವಾಗಿತ್ತು. ಈ ಎಲ್ಲ ಮಾಹಿತಿಗಳನ್ನು ಸಾಕ್ಷ್ಯ ಸಮೇತ "ಉತ್ಥಾನ" ಪತ್ರಿಕೆಗೆ ಕಳುಹಿಸಿ ದೂರು ನೀಡಿದ್ದೆ. ನನ್ನ ಆತ್ಮೀಯ ಮಿತ್ರರೂ, ಹಿರಿಯ ಪತ್ರಕರ್ತರೂ, ಭಾವಸಂಗಮದ ಸಂಚಾಲಕ ಶ್ರೀ ರಾಜೇಂದ್ರ ಪಾಟೀಲರೂ ಈ ಸಂಬಂಧ, "ಉತ್ಥಾನ" ಪತ್ರಿಕೆಗೆ ಓದುಗರ ವಿಭಾಗಕ್ಕೆ ಪತ್ರವನ್ನೂ ಬರೆದಿದ್ದರು.
ಈ ತಿಂಗಳ "ಉತ್ಥಾನ" ಪತ್ರಿಕೆಯಲ್ಲಿ ಶ್ರೀ ರಾಜೇಂದ್ರ ಪಾಟೀಲರ ಪತ್ರ ಪ್ರಕಟವಾಗಿದ್ದು, ಅದಕ್ಕೆ ಉತ್ಥಾನ ಪತ್ರಿಕೆಯ ಸಂಪಾದಕರು ಪ್ರತಿಕ್ರಿಯಿಸಿ ಖೇದ ವ್ಯಕ್ತಪಡಿಸಿದ್ದಾರೆ. ಅರ್ಥಾತ್ ಕೃತಿಚೌರ್ಯದ ವಿರುದ್ದ ವಿಷಾದ ವ್ಯಕ್ತಪಡಿಸಿದ್ದಾರೆ. ಹಾಗೂ ನಾನು ದೂರವಾಣಿಯಲ್ಲಿ ಮಾತನಾಡಿದಾಗ, ಶ್ರೀ ಗುರುಮೂರ್ತಿಯವರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿಯೂ ಹಾಗೂ ಅವರ ಗೌರವಧನವನ್ನು ತಡೆಹಿಡಿರುವುದಾಗಿ ತಿಳಿಸಿದ್ದಾರೆ.
ಹಾಗಾಗಿ ನಮ್ಮೆಲ್ಲರ ಈ ಕೃತಿಚೌರ್ಯದ ವಿರುದ್ಧದ ಹೋರಾಟಕ್ಕೆ ಒಂದು ತಾತ್ವಿಕ ಜಯ ಲಭಿಸಿದಂತಾಗಿದೆ. "ಉತ್ಥಾನ" ಪತ್ರಿಕಾ ಮಂಡಳಿಗೆ ನನ್ನ ಹಾರ್ದಿಕ ಧನ್ಯವಾದಗಳು. ಈ ಹೋರಾಟದಲ್ಲಿ ನನ್ನೊಡನೆ ನಿಂತಿರುವ ಶ್ರೀ ರಾಜೇಂದ್ರ ಪಾಟೀಲ್, ಶ್ರೀ ಶ್ರೀಕಾಂತ್ ಪತ್ರೆಮರ, ಶ್ರೀ ಅಂಬರೀಶ್ ಪೂಜಾರಿ ಗಣೇಶ್ ಕೊಡೂರು ಹಾಗೂ ಶ್ರೀ ರೇವಣ್ಣ ಬಳ್ಳಾರಿಯವರಿಗೆ ನಾನು ಚಿರಋಣಿ.
ನಾಡಿನ ಎಲ್ಲೆಡೆಯಿಂದಲೂ ನನಗೆ ಕರೆ ಮಾಡಿ, ಸಂದೇಶಗಳನ್ನು ಕಳಿಸಿ, ಕೃತಿಚೌರ್ಯದ ವಿರುದ್ದ ಬೆಂಬಲಕ್ಕೆ ನಿಂತಿರುವ ನಿಮಗೆಲ್ಲರಿಗೂ, ಮುಖಪುಸ್ತಕ ಹಾಗೂ ನೂರಾರು ವಾಟ್ಸಾಪ್ ಬಳಗದ ಸಮಸ್ತ ಸಾಹಿತ್ಯಕ ಸುಮನಸುಗಳಿಗೂ ನನ್ನ ಅಂತರಾಳದ ಅನಂತ ಪ್ರಣಾಮಗಳು.
ಇಷ್ಟಾದರೂ ಹಿರಿಯ ಸಾಹಿತಿಯೆನಿಸಿಕೊಂಡಿರುವ ಶ್ರೀ ಗುರುಮೂರ್ತಿಯವರಿಗೆ ತಮ್ಮ ತಪ್ಪಿನ ಅರಿವಾಗಿಲ್ಲ. ಕನಿಷ್ಟ ಒಂದು ಸೌಜನ್ಯದ, ಪಶ್ಚಾತಾಪದ ನುಡಿಯೂ ಇಲ್ಲ.. ಹಾಗಾಗಿ ಕಾನೂನಿನ ಹೋರಾಟ ಮುಂದುವರಿಸಲೇಬೇಕಿದೆ ಏನಂತೀರಾ..?"
ಪ್ರೀತಿಯಿಂದ
ಎ.ಎನ್.ರಮೇಶ್. ಗುಬ್ಬಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ