ಕಥೆInbox
ಕಥೆ 30x40 ಕನಸುಗಳು ಮೊಬೈಲ್ ಅಲಾರ್ಮ ಸರಿಯಾಗಿ ಆರು ಗಂಟೆಗೆ ಕೂಗುವುದಕ್ಕೂ ನಿಹಾರಿಕಾ ಧಿಗ್ಗನೇ ಎದ್ದು ಕುಳಿತೇಬಿಟ್ಟಳು. ಅಷ್ಟೇ ಅಲ್ಲ ಬೆಳಗಿನ ಛಳಿಗೆ ಮುದ್ದೆಯಾಗಿ ಮಲಗಿ ಕನಸು ಕಾಣುತ್ತಿದ್ದ ಸೂರ್ಯನ ಮೈಮೇಲಿನ ಹೊದಕಲು ತೆಗೆದು ಅವನನ್ನೂ ಎಬ್ಬಿಸಲಾರಂಭಿಸಿದಳು. "ಇವತ್ತಾದ್ರೂ ಒಂದಿಷ್ಟು ಹೊತ್ತು ನಿಶ್ಚಿಂತೆಯಿಂದ ಮಲಗಲಿಕ್ಕೆ ಬಿಡು ಮಾರಾಯ್ತಿ" ಎನ್ನುತ್ತ ಅವನು ಮತ್ತೆ ಮುದುಡಿಕೊಂಡ. "ಅಯ್ಯೋ ಪ್ಲೀಸ್ ಏಳ್ರಿಪ್ಪಾ. ಬೇಗ ತಿಂಡಿ ತಿಂದು ಹೊರಟ್ರೆ ನಾಲ್ಕಾದ್ರೂ ಸೈಟು ನೋಡಕೊಂಡು ಬರಬಹುದು" ಎನ್ನುತ್ತ ಮತ್ತೆ ಅವನ ಚಾದರನ್ನು ತೆಗೆದು ಎದ್ದು ಹೊರಟಳು. ಇವಳ ಕಿರಿಕಿರಿ ಮುಗಿಯುವುದಲ್ಲ ಎಂದುಕೊಳ್ಳುತ್ತ ಸೂರ್ಯನೂ ಅವಳ ಬೆನ್ನಿಗೇ ಎದ್ದ. ಚಹಾ ಕುಡಿಯುತ್ತ ಭಾನುವಾರದ ಲೋಕಲ್ ಪೇಪರಿನ ಎಕ್ಸಟ್ರಾ ಪೇಜಗಳಲ್ಲಿ ಕಣ್ಣು ಹಾಯಿಸುತ್ತಾ ಪೆನ್ನಿನಿಂದ ಗುರುತು ಮಾಡುತ್ತಿದ್ದಳು ನಿಹಾರಿಕಾ. ಭಾನುವಾರ ಮಾತ್ರ ಅವರು ಲೋಕಲ್ ಪತ್ರಿಕೆಯನ್ನು ತಪ್ಪದೇ ತೆಗೆದುಕೊಳ್ಳುತ್ತಿದ್ದರು. ಏಕೆಂದರೆ ಅದರಲ್ಲಿ ಬೆಳಗಾವಿಯಲ್ಲಿ ಮಾರಾಟಕ್ಕಿರುವ ಮನೆಗಳು, ಸೈಟುಗಳ ಜಾಹಿರಾತುಗಳು ಸಾಕಷ್ಟಿರುತ್ತಿದ್ದವು. ಬೇರೆ ಯಾವ ಪತ್ರಿಕೆಯಲ್ಲೂ ಇಷ್ಟೊಂದು ಮಾಹಿತಿ ಸಿಗುವುದು ಸಾಧ್ಯವೇ ಇಲ್ಲ ಎಂಬುದು ನಿಹಾರಿಕಾಳ ನಂಬುಗೆಯಾಗಿತ್ತು. ಮದುವೆಯಾಗಿ ಹದಿನೆಂಟು ವರ್ಷಗಳಾದರೂ ಬೆಳಗಾವಿಯಂಥ ಎರಡನೇ ದರ್ಜೆಯ ಶಹರದಲ್ಲಿ ಇನ್ನೂ ಒಂದು 30x40 ಸೈಟು ಮಾಡುವುದು ಅವರಿಂದ ಆಗಿರಲಿಲ್ಲ. ಒಂದೊಂದು ಸಲ ಕಟ್ಟಿದ ಮನೆ ಅಥವಾ ಅಪಾರ್ಟಮೆಂಟಿನಲ್ಲಿ ಫ್ಲ್ಯಾಟ ಒಂದನ್ನು ತೆಗೆದುಕೊಂಡುಬಿಡೋಣ ಎಂದು ಸೂರ್ಯ ಹೇಳುತ್ತಿದ್ದನಾದರೂ ಅದಕ್ಕೆ ಅವಳ ಸಂಪೂರ್ಣ ಅಸಮ್ಮತಿ ಇತ್ತು. ಅಪಾರ್ಟಮೆಂಟಿನಲ್ಲಿ ಕಾಲ ಕೆಳಗಿನ ನೆಲವೂ ನಮ್ಮದಲ್ಲ, ತಲೆಯ ಮೇಲಿನ ಸೂರೂ ನಮ್ಮದಲ್ಲ. ಕಾಲ ಕೆಳಗೆ ಇನ್ನಾರೋ ಓಡಾಡುತ್ತಿರುತ್ತಾರೆ, ಪಾತಾಳಲೋಕದಲ್ಲಿ ಓಡಾಡಿದಂತೆ, ಇನ್ನು ತಲೆಯ ಮೇಲೋ ಒಂದಿಲ್ಲಾ ಒಂದು ಸದ್ದು ಆಗುತ್ತಲೇ ಇರುತ್ತದೆ, ಸ್ವರ್ಗದ ನೆನಪನ್ನು ಕೊಡಲಿಕ್ಕೆ ಎನ್ನುವ ಅವಳ ವಾದ ಸೂರ್ಯನಿಗಂತೂ ವಿಚಿತ್ರ ಎನಿಸುತ್ತಿತ್ತು. ಇನ್ನು ಕಟ್ಟಿದ ಮನೆಯನ್ನು ಕೊಳ್ಳಲು ಅವಳದೂ ಅಂಥ ತಕರಾರೇನಿರಲಿಲ್ಲ. ಆದರೆ ಅಲ್ಲಿ ಹೋಗಿ ನೋಡಿದಾಗಲೇ ಅವುಗಳ ನಾನಾ ಅವಸ್ಥೆ ಇವರಿಗೆ ತಿಳಿದು ಮನಸ್ಸು ಬಾಡಿ ಹೋಗುತ್ತಿತ್ತು. ಹಾಗಾಗಿ ತಾವೇ ಒಂದು ಪ್ಲಾಟ್ ಕೊಂಡು ತಮಗೆ ಬೇಕಾದ ಹಾಗೆ ಮನೆ ಕಟ್ಟಬಹುದೆಂದು ನಿಹಾರಿಕಾ ದಿನಾಲೂ ಲೆಕ್ಕ ಹಾಕುತ್ತಿದ್ದಳು. ಮಕ್ಕಳಿಬ್ಬರೂ ಭಾನುವಾರದ ಲಾಭ ಪಡೆದು ಆರಾಮವಾಗಿ ಮಲಗಿರುವಾಗಲೇ ನಿಹಾರಿಕಾ ಅವರ ರೂಮಿಗೆ ಹೋಗಿ ಎರಡು ಪೆಟ್ಟು ಕೊಟ್ಟು ಎಬ್ಬಿಸಿದಳು. ಆದರೆ ಅವರು ಜಪ್ಪಯ್ಯ ಅನ್ನಲಿಲ್ಲ. "ಅಮ್ಮಾ ನಿನ್ನ ಪ್ಲಾಟುಗಳನ್ನು ನೋಡುತ್ತಾ ತಿರುಗಾಡಲು ನನಗೆ ಮನಸ್ಸಿಲ್ಲ, ಪ್ಲೀಸ್ ಆರಾಮವಾಗಿ ಮಲಗಲು ಬಿಡು. ನೀನು ಅಪ್ಪ ಇಡೀ ಊರು ತಿರುಗಾಡಿ ಬರ್ರಿ, ಆದ್ರೆ ಇವತ್ತು ಒಂದು ಸೈಟ್ ಬುಕ್ ಮಾಡಿಬರ್ರಿ. ನಮಗಂತೂ ನಿನ್ನ ಹುಡುಕಾಟ ನೋಡಿ ಬ್ಯಾಸರಾಗೇದ" ಎಂದು ಮಗಳು ಶ್ರಾವಣಿ ಮತ್ತೆ ಮುಸುಕೆಳೆದಳು. "ಹೌದು ನಿಮಗೆಲ್ಲಾ ಬ್ಯಾಸರಾಗೇದ ನಂಗೊತ್ತದ, ಆದರ ಇಷ್ಟ ಧೊಡ್ಡ ಊರಾಗೊಂದು ಮನಿ ಅಂತ ಆಗಲಿಲ್ಲಂದ್ರ ಮುಪ್ಪಿನ ವಯಸ್ಸಿನ್ಯಾಗ ಯಾರೂ ನಮಗ ಭಾಡಗಿ ಮನಿ ಕೊಡಂಗಿಲ್ಲ, ತಿಳಕೋ. ಅದಕ್ಕ ನಾ ಇಷ್ಟು ಒದ್ಯಾಡತೇನಿ. ನಿಮಗೆಲ್ಲಾ ನಗಚಾಟಕಿ ಆಗೇದ, ನನಗ ದಿನಾಲೂ ನಿದ್ದಿ ಹತ್ತಂಗಿಲ್ಲಾ ಮನಿ ಚಿಂತಿ ಮಾಡಿ, ಮಾಡಿ" ಎಂದು ಚೀರುತ್ತ ಅವಳು ಮತ್ತೆ ಹಾಲಿನತ್ತ ನಡೆದಳು. "ಬರೇ ಸೈಟ್ ನೋಡೋದ ಆತು. ಎಂದ ತೊಗೋತಾರೋ ಏನೋ? ನಲವತ್ತು ವಯಸ್ಸಾದ ಮ್ಯಾಲೂ ಒಂದು ಸೈಟ ಮಾಡಲಿಕ್ಕಾಗಿಲ್ಲಂದ್ರ ಇನ್ನ ಮನಿ ಯಾವಾಗ ಕಟ್ಟತಾರೋ ಏನೋ!", ಶ್ರಾವಣಿ ಸ್ವಗತವೆಂಬಂತೆ ತನ್ನಷ್ಟಕ್ಕೆ ತಾನೇ ಮಾತಾಡಿಕೊಂಡದ್ದು ನೀಹಾರಿಕಾಳ ಕಿವಿಗೆ ಬಿದ್ದೇ ಬಿತ್ತು. ಅವಳು ತಿರುಗಿ ಬೆಡರೂಮಿಗೆ ಬಂದಳು. ಮನಸ್ಸು ವ್ಯಗ್ರವಾಗಿತ್ತು. "ಹೌದು, ನಾವು ಕೈಲಾಗದಾವ್ರಿದ್ದೇವಿ. ನೀವೆಲ್ಲಾ ಈಗಿನ ಹುಡುಗೋರು ಮದವಿ ಮಾಡಕೊಳ್ಳೊಕಿಂತ ಮುಂಚೆನ ಪ್ಲಾಟು, ಫ್ಲ್ಯಾಟು, ಏನ ಬೇಕೋ ಅದನ್ನ ಮಾಡಿಕೊಂಡಬಿಡ್ರಿ, ಆತೂ? ನಿಮಗೆಲ್ಲಾ ಲಕ್ಷ ಲಕ್ಷ ಪಗಾರ ಕೊಡಲಿಕ್ಕೆ ಬೆಂಗಳೂರಾಗ ಸಾಫ್ಟವೇರ್ ಕಂಪನಿಯವ್ರು ತಯಾರಿರ್ತಾರ". ಶ್ರಾವಣಿಗೆ ಇದೇನೋ ಬೆಳಿಗ್ಗೆ ಬೆಳಿಗ್ಗೆ ಎಡವಟ್ಟಾಯ್ತು ಅಂತ ಅರಿವಾಗಿ ಇನ್ನೇನು ಮಾತಾಡಿದರೂ ಅಮ್ಮನ ವಟವಟ ಮತ್ತೂ ಹೆಚ್ಚಾಗುವುದು ಗೊತ್ತಿದ್ದಿದ್ದರಿಂದ ಸುಮ್ಮನೇ ಕಣ್ಣು ಮುಚ್ಚಿ ಮಲಗಿಬಿಟ್ಟಳು. ಆದರೆ ಈ ಕಡೆ ನೀಹಾರಿಕಾಳ ಮನಸ್ಸು ಕೊತಕೊತ ಕುದಿಯಲಾರಂಭಿಸಿತ್ತು. ಮದುವೆಯಾಗಿ ಒಂದು ವರ್ಷದಲ್ಲೇ ಕೆಲಸ ಹಿಡಿದು ಅಲ್ಲಿಂದ ಇಲ್ಲಿಯವರೆಗೂ ಒಂದೇಸಮನೆ ಒದ್ದಾಡಿದ್ದು, ಮಕ್ಕಳನ್ನು ಬೇಬಿಸಿಟ್ಟಿಂಗನಲ್ಲಿ ಬಿಟ್ಟರೂ ಮನಸ್ಸೆಲ್ಲ ಅತ್ತಲೇ ಎಳೆದು ದಿನಾಲೂ ಗಿಲ್ಟಿ ಫೀಲಿಂಗನಿಂದ ಬಳಲಿದ್ದು ಎಲ್ಲವೂ ನೆನಪಾದವು. ಆಗ ಬರುತ್ತಿದ್ದ ಸಂಬಳವೇ ಅಷ್ಟು. ತಾನು ಕೆಲಸ ಮಾಡುವ ಕಾಲೇಜಿನಲ್ಲಿ ಲೆಕ್ಚರರಗಳೇ ಎರಡು ಸಾವಿರ ಸಂಬಳಕ್ಕೆ ದುಡಿಯುತ್ತಿದ್ದರು. ಇನ್ನು ಕ್ಲೆರಿಕಲ್ ಸ್ಟಾಫಿಗೆಲ್ಲ ಎಷ್ಟು ಕೊಡುತ್ತಾರೆ? ಎಂಟು ನೂರು ರೂಪಾಯಿಗೆ ಸೇರಿದ್ದು ನಂತರ ಸರಕಾರಿ ಸ್ಕೇಲ ಆದನಂತರ ಸಾಕಷ್ಟು ಸುಧಾರಿಸಿದರೂ ಹಿಂದೆ ಮುಂದೆ ಯೋಚಿಸದೇ ಹಾಗೆ ಝುಂ ಅಂತ ಏನು ಬೇಕಾದರೂ ಕೊಳ್ಳುವ ತಾಕತ್ತು ಬರಲೇ ಇಲ್ಲ. ಎರಡು ಸಾವಿರಕ್ಕೆ ಸೇರಿ ತಾಳ್ಮೆಯಿಂದ ಕಾದ ಅನೇಕರಿಗೆ ಇದೀಗ ಯುಜಿಸಿ ಸಂಬಳ ಸಾಕೆನಿಸುವಷ್ಟಾಗಿದೆ. ಆದರೆ ನಾನು ಅವರಂತೆ ಲೆಕ್ಚರರ್ ಅಲ್ಲವಲ್ಲಾ! ಎಂದು ನಿಡುಸುಯ್ದಳು. ಇಬ್ಬರದೂ ಸೇರಿ ಇದೀಗ ಅರವತೈದು ಸಾವಿರದಷ್ಟು ಆದಾಯವಿದ್ದರೂ ಸಾಲವಿಲ್ಲದ ದಿನವೇ ಇಲ್ಲವಲ್ಲ! ಯಾವಾಗಲೂ ಒಂದಿಲ್ಲಾ ಒಂದು ಸಾಲದ ಕಂತು ಪಗಾರದಿಂದ ಕಟ್ ಆಗುತ್ತಲೇ ಇರುತ್ತದೆ. ಕೈಗೆ ಬರುವ ದುಡ್ಡು ಮತ್ತೆ ಕಡಿಮೆಯೇ. ಇದೊಂಥರಾ ಮೂರಕ್ಕಿಳಿಯದ, ಆರಕ್ಕೇರದ ಸಂಸಾರ. ಹಾಗಾಗಿಯೇ ಮಕ್ಕಳಿಗೆ ಸಸಾರವಾಗಿದೆ. ನಾವೂ ಒಂದು, ಒಂದೂವರೆ ಲಕ್ಷ ಗಳಿಸುತ್ತಿದ್ದರೆ ಇವರಿಬ್ಬರಿಗೂ ಗೌರವ ಇರುತ್ತಿತ್ತು. ದುಡ್ಡಿಲ್ಲದಿದ್ದರೆ ಮಕ್ಕಳೂ ತಮಾಷೆ ಮಾಡುವವರೇ ಎನಿಸಿ ಬೇಸರವಾಯಿತು. ಭಾನುವಾರವಾದರೂ ನಿಹಾರಿಕಾಳ ಸ್ನಾನ ಎಂಟು ಗಂಟೆಗೇ ಗಡಿಬಿಡಿಯಲ್ಲೇ ಮುಗಿದುಹೋಯಿತು. ಮತ್ತೆ ಉಪ್ಪಿಟ್ಟನ್ನೂ ಬೇಗನೇ ರೆಡಿ ಮಾಡಿ ಟೇಬಲ್ಲಿಗೆ ತಂದಳು. ಇವಳ ಅವಸರ ಗೊತ್ತಿದ್ದ ಸೂರ್ಯ ಅದಾಗಲೇ ಸ್ನಾನ ಮುಗಿಸಿ ರೆಡಿಯಾಗಿದ್ದ. ಇಬ್ಬರೂ ತಿಂಡಿ ಮುಗಿಸಿ ಮಕ್ಕಳಿಗೆ ಎದ್ದು ತಿನ್ನಲು ಕೂಗಿ ಕೂಗಿ ಹೇಳಿ ಸ್ಕೂಟರ್ ಏರಿ ಹೊರಟೇಬಿಟ್ಟರು. ಪ್ರತೀ ಭಾನುವಾರ ಇದೇ ಅವರ ದಿನಚರಿಯಾಗಿತ್ತು. ನೀಹಾರಿಕಾಳನ್ನು ಸೂರ್ಯ ಮದುವೆಯಾದಾಗ ಅವಳದು ಆಗಷ್ಟೇ ಡಿಗ್ರಿ ಮುಗಿದಿತ್ತು. ಮುಂದೆ ಓದಲು ಅವಳಿಗೆ ಮನಸ್ಸಿದ್ದರೂ ಮೂರು ಹೆಣ್ಣುಮಕ್ಕಳ ತಂದೆಗೆ ಮಕ್ಕಳ ಮದುವೆಯ ಅವಸರವಿತ್ತು. ಅದಕ್ಕೆ ತಕ್ಕಂತೆ ಕಂಪನಿಯೊಂದರಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಸೂರ್ಯ ಅವರಿಗೆ ಸಿಕ್ಕೇಬಿಟ್ಟ. ಸರಳವಾಗಿ ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿ ಕೈತೊಳೆದುಕೊಂಡಿದ್ದರು ಅಪ್ಪ-ಅಮ್ಮ. ಸೂರ್ಯ ಒಳ್ಳೆಯವನೇ ಹೌದು. ಕೆಲಸ ಮುಗಿಸಿ ಆರು ಗಂಟೆಗೆಲ್ಲ ಸರಿಯಾಗಿ ಮನೆಗೆ ಬಂದುಬಿಡುವವ. ಅವನ ಸಂಬಳ ದುಂದುಗಾರಿಕೆಯ ವೈಭವವನ್ನೂ ಅವನಿಗೆ ನೀಡಿರಲಿಲ್ಲ. ಮದುವೆಯಾಗಿ ವರ್ಷವಾದರೂ ಹೊಸ ಹೆಂಡತಿಗೆ ಒಂದು ಹೊಸ ಸೀರೆಯನ್ನೂ ಕೊಂಡುಕೊಡಲು ಅವನಿಗೆ ಆಗಿರಲೇ ಇಲ್ಲ. ಹಾಗಂತ ಅವಳೂ ಬೇಸರ ಪಟ್ಟುಕೊಂಡಿರಲಿಲ್ಲ. ಈಗಿಲ್ಲದಿದ್ದರೆ ಮತ್ತೆಂದೋ ಕೊಳ್ಳಬಹುದು, ಇಡೀ ಆಯಷ್ಯವೇ ಬಿದ್ದಿದೆ ಇನ್ನೂ ನಮ್ಮ ಮುಂದೆ ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದಳು. ಆದರೆ ಸೂರ್ಯನ ಸಂಬಳದಲ್ಲಿ ಸೀರೆಯಷ್ಟೇ ಅಲ್ಲ, ಮನೆಗೆ ಅಪರೂಪಕ್ಕೆ ಬರುವ ಅತಿಥಿಗಳಿಗೆ ಕೂಡಲು ಎರಡು ಕುರ್ಚಿಗಳನ್ನು ಕೂಡ ಕೊಳ್ಳುವುದು ಸಾಧ್ಯವಿಲ್ಲ ಎಂದು ಜ್ಞಾನೋದಯವಾದಾಗ ನಿಹಾರಿಕಾ ಮೈಕೊಡವಿಕೊಂಡು ಎದ್ದಳು. ತಾನೂ ಸಣ್ಣದೇ ಆದರೂ ಒಂದು ನೌಕರಿ ಮಾಡದಿದ್ದರೆ ನಡೆಯುವುದೇ ಇಲ್ಲವೆನ್ನುವ ಸತ್ಯವನ್ನು ತುಂಬ ತಡವಾಗಿ ಅರಿತದ್ದಕ್ಕಾಗಿ ತನ್ನನ್ನೇ ಬೈದುಕೊಳ್ಳುತ್ತ ದಿನಪತ್ರಿಕೆಗಳನ್ನು ನೋಡತೊಡಗಿದಳು. ಇವಳು ಕಲಿತ ಬಿ.ಕಾಂ. ಡಿಗ್ರಿಗೆ ಯಾವುದಾದರೂ ಒಂದು ಸಂಸ್ಥೆಯಲ್ಲಿ ಕೆಲಸ ಸಿಗುವುದು ಕಷ್ಟವಿರಲಿಲ್ಲ. ಆದರೆ ಸಂಬಳ ಮಾತ್ರ ಅಷ್ಟಕ್ಕಷ್ಟೇ. ಆದರೂ ಅವಳು ಮುತುವರ್ಜಿ ವಹಿಸಿ ದಿನದಿನವೂ ನೌಕರಿಯ ಜಾಹಿರಾತುಗಳನ್ನು ನೋಡಿ ತನ್ನ ಪದವಿಗೆ ತಕ್ಕ ಜಾಗಕ್ಕೆ ಅರ್ಜಿ ಗುಜರಾಯಿಸುವುದು, ಸಂದರ್ಶನ ಕೊಡುವುದೂ ಮಾಡುತ್ತಲೇ ಒಂದು ಕಾಲೇಜಿನಲ್ಲಿ ಕ್ಲರ್ಕ ಕೆಲಸ ಸಂಪಾದಿಸಿದಳು. ಈಗ ಊಟ-ತಿಂಡಿಗಷ್ಟೇ ಅಲ್ಲದೇ ಇತರ ಕೆಲವು ಅಗತ್ಯಗಳೂ ಪೂರೈಕೆಯಾಗತೊಡಗಿದವು. ನಿಧಾನವಾಗಿ ಮನೆಯಲ್ಲಿ ನಾಲ್ಕು ಪ್ಲಾಸ್ಟಿಕ್ ಕುರ್ಚಿಗಳು, ಟಿಪಾಯ್ ಬಂದವು. ನಂತರ ಹದಿನಾಲ್ಕು ಇಂಚಿನ ಪುಟ್ಟದೊಂದು ಕಪ್ಪು-ಬಿಳುಪು ಟಿ.ವಿ. ಮನೆಯೊಳಗೆ ಕಲರವ ಮಾಡಿತು. ಇಡ್ಲಿ-ದೋಸೆ ಮಾಡಲು ಮಿಕ್ಸಿಯೊಂದನ್ನು ಕೊಂಡರು. ಸೂರ್ಯನಿಗೂ ಸ್ವಲ್ಪ ನಿರಾಳವೆನಿಸತೊಡಗಿತು. ಮಧ್ಯೆ ನೀಹಾರಿಕಾಳ ಬಸಿರು, ಬಾಳಂತನಗಳ ಸಮಯದಲ್ಲಿ ತೆಗೆದುಕೊಳ್ಳುವ ರಜೆಗಳಿಗೂ ಸಂಬಳ ಕೊಡುವಷ್ಟು ಉದಾರಿಗಳಾಗಿರಲಿಲ್ಲ ಕಾಲೇಜಿನ ಆಡಳಿತ ಮಂಡಳಿಯವರು. ಸಂಬಳರಹಿತ ರಜೆ ನೀಡಿ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವುದೇ ಅವರ ಹೃದಯವಂತಿಕೆ ಎನ್ನುವಂತೆ ಮಾತನಾಡುತ್ತಿದ್ದ ಉಳಿದ ಕಲೀಗುಗಳನ್ನು ನೋಡಿ ಇವಳು ಬಾಯಿ ಹೊಲಿದುಕೊಂಡು ಸುಮ್ಮನಾಗಿ ಬಿಟ್ಟಳು. ಹಾಗಂತ ಇವಳು ಹಕ್ಕು ಪ್ರತಿಪಾದಿಸುವ ಯಾವುದೇ ಅವಕಾಶವನ್ನೂ ಸಂಸ್ಥೆಯವರು ನೀಡುತ್ತಿರಲಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಇವಳ ಕೆಲಸ ಖಾಯಂ ಆಗಿ ರಜೆಯ ಸೌಲಭ್ಯಗಳು ಸಿಗುವಂತಾಗುವ ವೇಳೆಗೆ ಎರಡೂ ಬಾಣಂತನಗಳು ಮುಗಿದುಹೋಗಿದ್ದವು. "ರಜೆ ಸಿಗುವುದಾದ್ರೆ ಇನ್ನೊಂದು ಛಾನ್ಸು ತೊಗೋತಿಯೇನು ನೋಡು" ಎಂದು ಸೂರ್ಯ ಒಂದೆರಡು ಬಾರಿ ಛೇಡಿಸಿದಾಗ "ರಜಾ ಒಂದು ಸಿಗ್ತದಂತ ಇನ್ನೊಂದು ನಾಯೇನೋ ಹಡೀಬಹುದು. ಮುಂದಿನ ತ್ರಾಸು, ಖರ್ಚು ನೀವು ನೋಡಕೋತೀರೇನು?" ಎಂದು ಮರುಸವಾಲು ಹಾಕಿ ಅವನನ್ನು ತಣ್ಣಗಾಗಿಸುತ್ತಿದ್ದಳು ನಿಹಾರಿಕಾ. ಸಣ್ಣ ಪುಟ್ಟ ಅಗತ್ಯಗಳು ಮುಗಿಯುತ್ತಿದ್ದಂತೇ ಫ್ರಿಜ್ಜು, ವಾಷಿಂಗ್ ಮಷೀನು ಅಂತೆಲ್ಲಾ ಸ್ವಲ್ಪ ದೊಡ್ಡ ವಸ್ತುಗಳ ಪಟ್ಟಿ ಬೆಳೆಯಿತು. ಅಷ್ಟರಲ್ಲಾಗಲೇ ಎಲ್ಲರ ಮನೆಯಲ್ಲಿ ದೊಡ್ಡ ಕಲರ್ ಟಿ.ವಿ.ಗಳು ಬಂದು ಕೂತಿದ್ದವಲ್ಲಾ! ಅದೊಂದು ದಿನ ಶ್ರಾವಣಿ ಮನೆಗೆ ಬಂದವಳೇ ತಮ್ಮ ಮನೆಯ ಟಿ.ವಿ. ಮುಂದೆ ನಿಂತು "ಏನು ಟಿ.ವಿ.ನೋ ಏನೋ ನಮ್ಮ ಗೆಳತ್ಯಾರ ಮನ್ಯಾಗೆಲ್ಲಾ ಧೊಡ್ಡು ಕಲರ್ ಟಿ.ವಿ. ತೊಗೊಂಡಾರ. ಎಷ್ಟ ಛಂದ ಕಾಣತದ ಅದರಾಗ. ನಮ್ಮಲ್ಲೆ ಒಂದ ಮನಿಯೊಳಗ ಇಷ್ಟ ಸಣ್ಣ ಬ್ಲ್ಯಾಕ ಎಂಡ್ ವೈಟ್ ಟಿ.ವಿ. ಇರೋದು. ನೀವು ಹೊಸಾ ಟಿ.ವಿ. ತರದಿದ್ರ ನಾ ಇನ್ನ ಮುಂದ ನಮ್ಮ ಗೆಳತಿ ಮನಿಗೇ ಹೋಕ್ತೇನಿ" ಎಂದು ಹೇಳಿದ್ದು ಕೇಳಿ ಇಬ್ಬರಿಗೂ ಮಕ್ಕಳು ಬೆಳೆಯುತ್ತಿರುವ ಅನುಭವವಾಯ್ತು. ಮತ್ತೆ ಹೊಸ ಸಾಲ, ಹೊಸ ಟಿ.ವಿ. ಆದರೆ ಬೇಡಿಕೆಗಳ ಪಟ್ಟಿ ಮುಗಿಯುವದಲ್ಲ. ಇಡೀ ಮನೆಗೆ ಒಂದು ಲ್ಯಾಂಡಲೈನ್ ಇದ್ದಿದ್ದು ಹೋಗಿ ಇದೀಗ ಎಲ್ಲರ ಕೈಯಲ್ಲಿ ಮೊಬೈಲಗಳು. ಕೀಪ್ಯಾಡ್ ಮೊಬೈಲ್ ಬದಲಾಗಿ ಹೊಸ ಸ್ಮಾರ್ಟಫೋನ್ ಕೊಡಿಸು ಎಂದು ದಿನಾಲೂ ಮಗರಾಯ ಪೀಡಿಸತೊಡಗಿದ್ದನ್ನು ಸೂರ್ಯ ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಳ್ಳಲು ಹೋಗಿರಲಿಲ್ಲ. ನಾಲ್ಕು ದಿನ ಕಾಡಿ ಸುಮ್ಮನಾಗುತ್ತಾನೆಂದು ಅಂದಾಜಿಸಿ ಸುಮ್ಮನಿದ್ದುಬಿಟ್ಟಿದ್ದ. ಆದರೆ ಮಗ ಒಂದು ದಿನ ಎಲ್ಲರೂ ರಾತ್ರಿಯ ಊಟಕ್ಕೆ ಕುಳಿತಾಗಲೇ ಹಳೆಯ ಮೊಬೈಲನ್ನು ರಪ್ಪನೇ ನೆಲಕ್ಕೆ ಬೀಸಿ ಒಗೆದ ಒಗೆತಕ್ಕೆ ಮೊಬೈಲಿನ ಅಂಗಗಳೆಲ್ಲ ಕಳಚಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಇಡೀ ಮನೆ ಸ್ಥಬ್ದವಾಗಿ ಹೋಯ್ತು. ಶಿಶಿರನ ಕೋಪದ ಅಂದಾಜಾದದ್ದೇ ಅವತ್ತು. ನೀಹಾರಿಕಾ ಒಂದೂ ಮಾತಾಡದೇ ಹೋಗಿ ಮಲಗಿದ್ದಳು. ಆದರೆ ಮುಂದೆ ಎರಡೇ ದಿನಗಳಲ್ಲಿ ಮಗನ ಕೈಗೆ ಹೊಸ ಮೊಬೈಲಿರಿಸಿ ಹಗುರವಾಗಿದ್ದ ಸೂರ್ಯ. ಈಗಿನ ಮಕ್ಕಳು ತಮ್ಮ ಹಾಗಲ್ಲ, ಗೆಳತಿ-ಗೆಳೆಯರೊಂದಿಗೆ ತಮ್ಮ ಮನೆಯ ಸೌಕರ್ಯ-ಸೌಲಭ್ಯಗಳನ್ನು ಹೋಲಿಸಿ ನೋಡಿ ಕೀಳರಿಮೆ ಪಟ್ಟುಕೊಳ್ಳುವುದೂ ಅರಿವಿಗೆ ಬಂದು ಮನಸ್ಸು ವಿಷಣ್ಣವಾಯ್ತು. ತನ್ನ ಗೆಳತಿಯೊಬ್ಬಳು ಅಪ್ಪನೊಡನೆ ಕಾರಿನಲ್ಲಿ ತಿರುಗಾಡುತ್ತಿದ್ದ ನೆನಪಾಯ್ತು ನೀಹಾರಿಕಾಗೆ. ಆಗ ತಮ್ಮ ಮನೆಯಲ್ಲಿ ಅಪ್ಪನ ಹತ್ತಿರ ಸೈಕಲ್ ಕೂಡ ಇರಲಿಲ್ಲ. ಆದರೆ ತನಗೆ ಮತ್ತು ಇತರ ಗೆಳತಿಯರಿಗೆ ಕಾರಿರುವ ಗೆಳತಿಯ ಬಗ್ಗೆ ಅಸುಯೆಯೂ ಇರಲಿಲ್ಲ, ಕೌತೂಕವೂ ಅನಿಸಿರಲಿಲ್ಲ ಎಂದೆನಿಸಿ ಒಂದು ಮುಗುಳ್ನಗೆ ಹಾಯ್ದು ಹೋಯಿತು. ತಾನು ಚಿಕ್ಕವಳಿರುವಾಗ ಎಲ್ಲರ ಪರಿಸ್ಥಿತಿಯೂ ಅಷ್ಟಕ್ಕಷ್ಟೇ. ಊಟ-ತಿಂಡಿಗೆ ಹೇಳಿಕೊಳ್ಳುವಂಥ ಕೊರತೆಯಿರಲಿಲ್ಲವಾದರೂ ಮತ್ಯಾವ ವೈಭವವಿಲ್ಲದ ಬದುಕಿನಲ್ಲಿ ಶ್ರೀಮಂತವಾದ ಮುಗ್ಧ ಬಾಲ್ಯವಿತ್ತು ಎಂದು ಒಮ್ಮಿಲೇ ಅನಿಸಿತು. ವಸ್ತುಗಳ ತುಲನೆಯಲ್ಲಿ ಇಂದಿನ ಮಕ್ಕಳು ಹುಡುಗುತನದ ಸಹಜ ಆನಂದವನ್ನು ಕಳೆದುಕೊಳ್ಳುತ್ತಿದ್ದಾರೇನೋ! ಆದರೆ ಹಾಗಿಲ್ಲದ ತಾನು ಕೂಡ ಈಗ ಸೈಟಿನ ಹಿಂದೆ ಬಿದ್ದಿದ್ದೇನಲ್ಲ ಎಂಬ ಅರಿವು ಮೂಡಿ ತಪ್ಪಿತಸ್ಥ ಭಾವ ಏರತೊಡಗಿತು. ಇಂದಿನ ದಿನಮಾನಗಳಲ್ಲಿ ಬೆಳಗಾವಿಯಂಥ ಊರಲ್ಲಿ ಒಂದು ಸ್ವಂತದ ಮನೆಯೂ ಇರಲಿಲ್ಲವೆಂದರೆ ಮುಪ್ಪಿನ ಬದುಕು ಎಂಥ ಘೋರವಾಗಬಹುದು, ಮಕ್ಕಳ ಮುಂದಂತೂ ಈಗಲೇ ಕೈಲಾಗದವರು ಎನ್ನುವ ಬಿರುದು ಸಿಕ್ಕಿಬಿಟ್ಟಿದೆ, ನಾಳೆ ಇನ್ನೂ ಏನೇನು ಅನಿಸಿಕೊಳ್ಳಬೇಕೋ? ಅದಕ್ಕಿಂತ ನಮ್ಮದೇ ಅಂತ ಒಂದು ಮನೆಯಾದರೆ-ಅದು ಸಣ್ಣದಿರಲಿ, ದೊಡ್ಡದಿರಲಿ- ಯಾರ ಹಂಗಿಗೂ ಒಳಗಾಗದೇ ಉಳಿದ ಬದುಕನ್ನು ಜೀವಿಸಿಬಿಡಬಹುದು. ಆ ಒಂದು ನಿಶ್ಚಿಂತೆಗೋಸ್ಕರವಾದರೂ ಈ ಪ್ಲಾಟು, ಈ ಮನೆ ಎಲ್ಲ ಬೇಕೇಬೇಕು ಎನ್ನುವ ಸಮಝಾಯಿಶಿ ಹೊಳೆದು ಸ್ವಲ್ಪ ಸಮಾಧಾನವಾಯಿತು. ಟಿಳಕವಾಡಿಯಿಂದ ಸುಮಾರು ಎರಡು ಕಿಲೋಮೀಟರು ದೂರದಲ್ಲಿ ಕೃಷಿಭೂಮಿಯನ್ನು ಈಗಷ್ಟೇ ಎನ್ನೆ ಮಾಡಿ ನಲವತ್ತು ಪ್ಲಾಟುಗಳನ್ನು ಮಾಡಿ ಮಾರಾಟ ಮಾಡುತ್ತಿರುವ ಜಾಹಿರಾತನ್ನು ಬೆಳಿಗ್ಗೆ ಓದಿದ್ದು ಏಜಂಟನಿಗೆ ಫೋನು ಮಾಡಿಕೊಂಡಿದ್ದರಿಂದ ಅವನು ಆಗಲೇ ಪ್ಲಾಟ್ ಹತ್ತಿರ ಬಂದು ಇವರಿಗಾಗಿ ಕಾಯುತ್ತಿದ್ದ. ಟಿಳಕವಾಡಿ ಎಂದರೆ ಬೆಳಗಾವಿಯಲ್ಲಿ ಹಳೆಯ ಮತ್ತು ಪಾಷ್ ಏರಿಯಾ. ಹಿಂದೆ ಊರ ಹೊರಗಿದ್ದ ಈ ಏರಿಯಾದಲ್ಲಿ ಒಬ್ಬೊಬ್ಬರು ಕೇವಲ ಐದು ಸಾವಿರಕ್ಕೆ ಐದು ಗುಂಠೆ ಜಾಗ ಕೊಂಡು ಮುಂದೆ ಸುಂದರವಾದ ದೊಡ್ಡ ಕಲ್ಲಿನ ಮನೆಯನ್ನು ಕಟ್ಟಿ ಜೊತೆಯಿರಲೆಂದು ಹಿಂದೆ ಔಟಹೌಸ್ ಕಟ್ಟಿಸಿ ಕೆಲಸದವರನ್ನು ಇಟ್ಟುಕೊಳ್ಳುತ್ತಿದ್ದರಂತೆ. ಕೆಲವರು ಅಂಥ ಔಟಹೌಸಗಳನ್ನು ಬಾಡಿಗೆಗೂ ಕೊಟ್ಟಿದ್ದರು. ಇದೀಗ ಅಂಥವರನೇಕರು ತಮ್ಮ ಜಾಗಗಳನ್ನು ಬಿಲ್ಡರುಗಳಿಗೆ ಕೊಟ್ಟು ಸಾಕಷ್ಟು ದುಡ್ಡು ಎಣಿಸಿದ್ದರು. ಜನವಸತಿ ಬೆಳೆದಂತೆ ಪ್ಲಾಟುಗಳು ಇನ್ನೂ ಮುಂದೆ ಮುಂದೆ ಹೋಗುತ್ತಿದ್ದವು. ಬತ್ತ ಬೆಳೆಯುವ ಹೊಲಗಳೆಲ್ಲ ನಾಲ್ಕಾರು ವರ್ಷ ಪಡಬಿದ್ದು ಕೊನೆಗೆ ನಾನ್-ಅಗ್ರಿಕಲ್ಚರ್ ಲ್ಯಾಂಡ್ ಅಂತ ನೋಂದಾವಣೆಯಾಗಿ ವಿಪರೀತ ರೇಟಿಗೆ ಮಾರಾಟವಾಗುತ್ತಿದ್ದವು. ಅಂಥದೇ ಒಂದು ಜಾಗವನ್ನರಿಸಿ ನೀಹಾರಿಕಾ, ಸೂರ್ಯ ಬಂದಿದ್ದು. ಇದಕ್ಕಿಂತ ಹತ್ತಿರವಂತೂ ಯಾವ ಜಾಗವೂ ಸಿಗುವುದು ಸಾಧ್ಯವಿರಲಿಲ್ಲ. ಊರೊಳಗೆ, ಅಥವಾ ಇಲ್ಲೇ ಟಿಳಕವಾಡಿಯಲ್ಲಿ ಹಳೆಯ ಮನೆಗಳನ್ನು ಕೊಂಡ ಕೆಲ ಶ್ರೀಮಂತರು ಆ ಮನೆಗಳನ್ನು ಕೆಡವಿ ತಮಗೆ ಬೇಕಾದಂತೆ ಆಧುನಿಕ ಮನೆಗಳನ್ನು ಕಟ್ಟಿಕೊಂಡಿದ್ದರು. ಆದರೆ ಅಂಥ ಮನೆಗಳನ್ನು ಕೊಳ್ಳುವುದು ಕನಸಿನಲ್ಲಯೂ ತಮಗೆ ಸಾಧ್ಯವಿಲ್ಲ. ಅವೆಲ್ಲ ಬಿಸನೆಸ್ಸು ಮಾಡಲು ವಲಸೆ ಬಂದ ರಾಜಸ್ಥಾನದ ಮಾರ್ವಾಡಿಗಳಿಗೆ, ಮಂಗಳೂರಿನ ಶೆಟ್ಟಿಗಳಿಗೆ, ದೊಡ್ಡ ಹೆಸರು ಮಾಡಿದ ವಕೀಲರು, ಡಾಕ್ಟರುಗಳಿಗೆ ಮಾತ್ರ ಸಾಧ್ಯ. ತಮ್ಮಂಥವರದೇನಿದ್ದರೂ ದೂರದಲ್ಲಿ ಸಣ್ಣದೊಂದು ಜಾಗ ಕೊಳ್ಳಬಹುದಾದಷ್ಟೇ ಸಂಭ್ರಮ. ಏಜಂಟನು ಪ್ಲಾಟಿನ ವರ್ಣನೆಗೆ ತೊಡಗಿದ್ದ. "ಇಲ್ಲಿ ನೀರಿನ ಸೆಲಿ ಭಾಳ ಚೊಲೋ ಅದ ನೋಡ್ರಿ, ನೂರು ಫೂಟಿಗೆ ನೀರು ಹತ್ತತದ. ಬೋರವೆಲ್ ತೆಗಿಸಿಬಿಡ್ರಿ, ಮನಿ ಕಟ್ಟಲಿಕ್ಕೂ ನೀರು ಆಗ್ತದ. ಹವಾ ಅಂತೂ ಭಾಳ ಛೊಲೋ ಅದ ನೋಡ್ರಿ, ಸಿಟಿ ಒಳಗಿನ ಧೂಳ, ಹೊಲಸು ಏನೇನೂ ಇಲ್ಲ". ನೀಹಾರಿಕಾಗೆ ರೇಟಿನ ಬಗ್ಗೆ ಕೇಳುವ ಆತುರ. "ರೇಟು ನಮ್ಮ ಸಾಹೇಬ್ರು ಹೇಳ್ತಾರ, ಅವ್ರ ಮನಿಗೇ ಕರಕೊಂಡು ಹೋಗ್ತೇನಿ" ಎಂದು ಅವನು ತನ್ನ ಸ್ಕೂಟರ್ ಸ್ಟಾರ್ಟ ಮಾಡಿದ. ಅವನ ಹಿಂದೆಯೇ ಇವರೂ ಸಾಗಿದರು. ಜಾಗದ ಮಾಲಕನ ಮನೆಯಲ್ಲಿ ಆಗಲೇ ನಾಲ್ಕಾರು ಜನ ಕುಳಿತು ದಾರಿ ಕಾಯುತ್ತಿದ್ದರು. ಇವರೂ ಕುಳಿತರು. ಕೆಲಸದವನೊಬ್ಬ ಬಂದು ಎಲ್ಲರ ಮುಂದೆ ನೀರಿನ ಗ್ಲಾಸುಗಳಿದ್ದ ಟ್ರೇ ಹಿಡಿದ. ತಕ್ಷಣ ನೀರಡಿಕೆಯೆನಿಸಿ ನೀಹಾರಿಕಾ ಗ್ಲಾಸ ಒಂದನ್ನು ಎತ್ತಿಕೊಂಡು ಗಟಗಟನೇ ನೀರು ಕುಡಿದಳು. ಚಡಪಡಿಕೆ ಸ್ವಲ್ಪ ಕಡಿಮೆಯೆನಿಸಿ ನಿರಾಳವಾದಳು. ಐದು ನಿಮಿಷದಲ್ಲಿ ಮಾಲಿಕ ಬಂದು ಕುಳಿತುಕೊಂಡ. ಎಲ್ಲರೂ ಬೆಳಿಗ್ಗೆ ಪೇಪರನಲ್ಲಿ ಜಾಗದ ಜಾಹಿರಾತು ನೋಡಿಕೊಂಡು ಬಂದವರೇ. 30x40 ಸೈಟಿಗೆ ಮೂವತ್ತು, ಡಬಲ್ ಪ್ಲಾಟಿಗೆ ಐವತ್ತೆಂಟು ಎಂದ. ನೀಹಾರಿಕಾ ಕುಳಿತಲ್ಲೇ ಇಳಿದು ಹೋದಳು. ಮೆಲ್ಲನೇ ಸೂರ್ಯನತ್ತ ದೃಷ್ಟಿ ಹಾಯಿಸಿದವಳಿಗೆ ಅವನ ಮುಖದ ಮೇಲಿಂದ ಮನಸಿನ ಭಾವನೆಗಳನ್ನು ಓದಲಾಗಲಿಲ್ಲ. ಏನಾದರೂ ಹೇಳಿ ಎನ್ನುವಂತೆ ಸಣ್ಣಗೇ ಚಿವುಟಿದಳು. "ಮೂವತ್ತು ಭಾಳ ಆತ್ರಿ. ನಕ್ಕಿ ಒಂದ ರೇಟ ಹೇಳ್ರಿ" ಎಂದು ಪ್ರಾರಂಭಿಸಿದ. ಮಾಲಿಕ ಸಣ್ಣಗೇ ಗತ್ತಿನಿಂದ ನಕ್ಕು "ಅದು ಭಾಳಲ್ರೀ, ಕಡಿಮಿನ ಆತು. ಟಿಳಕವಾಡಿ ಆಸಪಾಸ ಈಗ ರೇಟೇನದ ಅನಕೊಂಡೀರಿ ನೀವು? ಒಂದು ಗುಂಠೆಕ್ಕ ಐವತ್ತು ಲಕ್ಷ ನಡೀಲಿಕತ್ತದ. ನಾನು ಸ್ವಲ್ಪ ರೊಕ್ಕದ ಅಡಚಣಿ ಅದ ಅಂತ ಸೋವಿಗೆ ಕೊಡಲೀಕತ್ತೇನಿ", ಅಂದ. ಮುಂದೇನು ಮಾತು, ಎದ್ದು ಹೋಗುವ ಎಂಬಂತೆ ಸೂರ್ಯ ಅವಳ ಮುಖ ನೋಡಿದ. ನೀಹಾರಿಕಾಳಿಗೆ ಏಳುವ ಮನಸ್ಸಿಲ್ಲ. ಆದರೆ ಮೂವತ್ತು ತಮ್ಮಿಂದ ಆಗುವ ಮಾತಲ್ಲ. "ಒಂದು ಫೈನಲ್ ರೇಟ ಹೇಳಿಬಿಡ್ರಿ" ಅಂತ ಅವಳೂ ಸೇರಿಸಿದಳು. "ಇಪ್ಪತೆಂಟು ಲಾಸ್ಟ ನೋಡ್ರಿ, ನಿಮಗೂ ಮನಸ್ಸು ಬಂದದ ಅನಕೊಂಡು ಹೇಳ್ಲೀಕತ್ತೇನಿ. ನಿಮಗ ಪಸಂದ ಇದ್ರ ಐದ ಲಕ್ಷ ಅಡ್ವಾನ್ಸು ಕೊಟ್ಟು ಎಗ್ರೀಮೆಂಟ ಮಾಡೋಣು. ಮ್ಯಾಲಿನ ಎಂಟ ಲಕ್ಷ ಮಾತ್ರ ಕ್ಯಾಷ್ ಬೇಕು, ಇಪ್ಪತ್ತು ಲಕ್ಷಕ್ಕ ಸೇಲಡೀಡ ಮಾಡೋಣು" ಎಂದವನೇ ಬೇರೆ ಗಿರಾಕಿಗಳ ಕಡೆಗೆ ತಿರಗಿಬಿಟ್ಟ. ಇನ್ನು ಅಲ್ಲಿ ಬಾರ್ಗೇನಿಂಗಿಗೆ ಅವಕಾಶವಿಲ್ಲ ಎನ್ನುವುದು ಇಬ್ಬರಿಗೂ ತಿಳಿದು "ನಾವು ತಿಳಸ್ತೇವಿ" ಎನ್ನುತ್ತ ನಿಧಾನ ಕಾಲೆಲೆದುಕೊಂಡು ಹೊರಬಂದರು. ರಾತ್ರಿ ಮಲಗಿದಾಗ ಮತ್ತೆ ಅದೇ ಮಾತು ತೆಗೆದಳು ನಿಹಾರಿಕಾ. "ಹಿಂಗ ರೇಟ ಬೆಳದ್ರ ಸಾಮಾನ್ಯ ಮಂದಿ ಸೈಟ ತೊಗೊಂಢಂಗ, ಮನಿ ಕಟ್ಟಿಧಂಗ ಬಿಡ್ರಿ. ಈ ಜನ್ಮದಾಗ ನಮ್ಮದಂತ ಒಂದ ಮನಿ ಆಗತದ ಅಂತ ನನಗೇನ ಆಶಾ ಇಲ್ಲ". "ನೀರೂ, ಈ ಜಗತ್ತಿನ್ಯಾಗ ಎಷ್ಟ ಮಂದಿಗೆ ಸ್ವಂತ ಮನಿ ಇರ್ತಾವ ಹೇಳು? ಎಷ್ಟೋ ಮಂದಿಗೆ ಭಾಡಗಿ ಮನಿ ಹಿಡಿಯೋದು ಸೈತ ಕಷ್ಟ ಇರ್ತದ", ಸೂರ್ಯ ಸಮಾಧಾನ ಹೇಳುತ್ತಲೇ ಅವಳನ್ನು ಹತ್ತಿರಕ್ಕೆಳೆದುಕೊಂಡು ಬ್ಲ್ಯಾಂಕೆಟ್ಟೊಳಗೆ ತೂರಿಸಿಕೊಂಡ. ಅವನ ಬೆಚ್ಚನೇಯ ತೋಳಿನೊಳಗೆ ತೂರಿಕೊಂಡು ಕುಸುಕುಸು ಮಾಡುತ್ತಲೇ ಮಲಗಿಕೊಂಡಳು. "ಎಷ್ಟ ಛಂದ ಮನಿ ಕಟ್ಟೀರೀಪಾ, ಪ್ಲ್ಯಾನ್ ನಿಮ್ಮದನೋ ಏನು ಇಂಜಿನಿಯರದೋ?", ಪಕ್ಕದ ಮನೆಯ ವಾಸಂತಿ ಕೇಳುತ್ತಿದ್ದರೆ ಹೆಮ್ಮೆ, ಖುಶಿಯಿಂದ ನಿಹಾರಿಕಾ ಉಬ್ಬಿ ಹೋಗಿದ್ದಳು. "ನಾನು ನಮ್ಮನಿಯವ್ರು ಇಬ್ರೂ ಕೂಡೇ ಪ್ಲ್ಯಾನ್ ತಗದು ಇಂಜಿನಿಯರಗೆ ಕೊಟ್ಟಿದ್ವಿ ನೋಡ್ರಿ. ಪ್ಲಾಟು ತೊಗೊಳೋಕಿಂತಾ ಮೊದ್ಲಿಂದ ಮನಿ ಹೆಂಗಿರಬೇಕಂತ ಪ್ಲ್ಯಾನ ಹಾಕೋದ ಹಾಕೋದು. ಸಣ್ಣ ಸೈಟ ಇದ್ರ ಹೆಂಗ ಕಟ್ಟಸಬೇಕು, ದೊಡ್ಡದಿದ್ರ ಹೆಂಗ? ಒಟ್ಟು ಒಂದು ಹತ್ತು ಪ್ಲ್ಯಾನ್ ಡ್ರಾಯಿಂಗ ಮಾಡೇ ಇಟ್ಟಿದ್ವಿ." ವಾಸಂತಿಗೆ ಆಶ್ಚರ್ಯವೋ ಆಶ್ಚರ್ಯ! "ಲಕ್ಕೀ ಇದ್ದೀರಿ ಬಿಡ್ರಿ ನೀವು. ನಿಮ್ಮನಿಯವ್ರೂ ನಿಮ್ಮ ಜೋಡಿ ಕೂತು ಕನಸಿನ ಡ್ರಾಯಿಂಗ್ ಹಾಕ್ತಾರಂದ್ರ ಖರೇನ ಭಾಳ ಒಳ್ಳೆಯವ್ರ ಇರಬೇಕು. ನಮ್ಮಮನಿ ಕಟ್ಟೂವಾಗ ನಮ್ಮೆಜಮಾನ್ರು ನಂದೊಂದ ಮಾತೂ ಕೇಳ್ಲಿಲ್ಲ. ಹೋಗ್ಲೀ ಅಡಗೀಮನಿಗೆರೆ ಹೆಣ್ಣಮಕ್ಕಳನ ಒಂದ ಮಾತು ಕೇಳಬೇಕೋ ಇಲ್ಲೋ ಅದನ್ನೂ ತಮ್ಮ ಮನಸ್ಸು ಬಂಧಂಗ ಕಟ್ಟಿಸ್ಯಾರ ನೋಡ್ರಿ. ಈಗ ನನಗೂ ಸ್ವಲ್ಪ ಧೈರ್ಯ ಬಂದದ. ದಿನಾಲೂ ಜಗಳಾಡತೇನಿ. ಇನ್ನ ಅವ್ರು ಅಡಗಿಮನಿ ನಾ ಹೇಳಿಧಂಗ ರಿನೋವೇಷನ್ ಮಾಡಿದಮ್ಯಾಲ ನಾ ಜಗಳಾ ಕಡಿಮೆ ಮಾಡಾಕಿ ನೋಡ್ರಿ", ಬಾಜು ಮನೆಯವಳು ತನ್ಮಯಳಾಗಿ ಗಂಡನ ಆರತಿ ಎತ್ತುತ್ತಿರುವುದನ್ನು ನೋಡಿ ನೀಹಾರಿಕಾ ಮನದುಂಬಿ ನಕ್ಕಳು. ಎತ್ತರವಾದ ಸೀಲಿಂಗ್ ಇರುವ ಹಾಲನ್ನು ಬಳಸಿಕೊಂಡು ಮೇಲೆ ಹೋಗಿದ್ದ ಮೆಟ್ಟಿಲುಗಳನ್ನು ಹತ್ತಿ ಇಬ್ಬರೂ ಮೊದಲಂತಸ್ತಿನ ಬಾಲ್ಕನಿಗೆ ಬಂದರು. ಅಲ್ಲಿ ಕೆಂಪು, ಗುಲಾಬಿ, ಹಳದಿ, ಬಿಳಿ ಬಣ್ಣದ ಗುಲಾಬಿ ಗಿಡಗಳ ಕುಂಡಗಳನ್ನು ಸಾಲಾಗಿ ಇಟ್ಟಿದ್ದರು. ಎಲ್ಲ ಗಿಡಗಳೂ ಹೂಬಿಟ್ಟು ನಗುತ್ತಿದ್ದವು. "ಎಷ್ಟ ಛಂದ ಹೂ ಆಗ್ಯಾವ್ರೀ ನಿಹಾರಿಕಾ. ಈ ಹೂವಿನ ಗಿಡಗಳ ಹವ್ಯಾಸ ಯಾರದು ನಿಮ್ಮನಿ ಒಳಗ" ಎನ್ನುತ್ತಾ ಅವಳು ಹೂಗಳನ್ನು ನೋಡಲು ಬಗ್ಗುವುದಕ್ಕೂ ಪಕ್ಕದ ಮನೆಯ ತಾರಸಿಯಿಂದ ಬೆಕ್ಕೊಂದು ಇವರ ಟೆರೆಸಿನ ಮೇಲೆ ಜಿಗಿದದ್ದು ವಾಸಂತಿಯ ಭುಜಕ್ಕೆ ತಾಕಿಕೊಂಡೇ ಇಳಿಯಿತು. ಹೆದರಿದ ವಾಸಂತಿ ಗುಲಾಬಿ ಗಿಡದ ಪಾಟಿನ ಮೇಲೇ ಬಿದ್ದು, ಪಾಟು ಕೆಳಗೆ ಉರುಳಿತು. ಹೆದರಿದ ನೀಹಾರಿಕಾ ಕೂಗುತ್ತಾ ಇನ್ನೇನು ಬೀಳಲಿದ್ದವಳು ಗಟ್ಟಿಯಾಗಿ ಕಾಲೂರಿ ನಿಂತಳು. ಬ್ಲ್ಯಾಂಕೆಟ್ಟಿನೊಳಗಿಂದ ಹೊರಗೆ ಮುಖ ತೂರಿಸಿದ ಸೂರ್ಯ, "ಮಹಾರಾಣಿಯವರು ಇವತ್ತು ತಮ್ಮ ಕನಸಿನ ಮಹಲಿನ ಎಷ್ಟನೇ ಮಹಡಿಯಿಂದ ನೆಲಕ್ಕುರುಳಿದರು? ಪೆಟ್ಟಾಯ್ತೇ?" ಎಂದು ಅಂಥ ಸರಿರಾತ್ರಿಯಲ್ಲೂ ನಾಟಕೀಯವಾಗಿ ಕೇಳಿದ್ದಕ್ಕೆ ತುಸು ಮುನಿಸು, ತುಸು ನಾಚಿಕೆ, ತುಸು ಹಿಂಜರಿಕೆಯೆಲ್ಲದರಿಂದ ಕೂಡಿ, "ನಮ್ಮ ಮಹಲು ಇನ್ನೆಷ್ಟು ದೊಡ್ಡದಿರ್ತದ ಬಿಡ್ರಿ! ಒಂದನೇ ಫ್ಲೋರಿಂದ ಬಿದ್ದೆ ಅಷ್ಟ" ಎಂದು ಹೇಳಿ ಮತ್ತೆ ಬ್ಲ್ಯಾಂಕೆಟ್ಟಿನೊಳಗೆ ತೂರಿಕೊಂಡಳು. ********************** ನೀತಾ. ರಾವ್.
|
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ